ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ ಚಾಲನೆ; ಐದು ದಶಕಗಳ ಪಯಣಕ್ಕೆ ಹಸಿರಿನ ಗೌರವ
ಸುಳ್ಯ, ಆ. 13: ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ‘ಸುವರ್ಣ ಸಿರಿ – 50 ಸಸಿಗಳು, 50 ಸುವರ್ಣ ವರ್ಷಗಳು’ ಎಂಬ ವಿನೂತನ ಹಸಿರು ಅಭಿಯಾನವನ್ನು ಮಂಡೆಕೋಲಿನಲ್ಲಿ ಅಗಸ್ಟ್ 13 ಗುರುವಾರದಂದು ಹಮ್ಮಿಕೊಂಡಿತು.
1976ರಿಂದ 2026ರವರೆಗೆ ಐದು ದಶಕಗಳ ಶೈಕ್ಷಣಿಕ ಪಯಣವನ್ನು ಸ್ಮರಿಸುವ ಸಂಕೇತವಾಗಿ 50 ಸಸಿಗಳನ್ನು ನೆಡುವ ಮೂಲಕ ಸುವರ್ಣ ಮಹೋತ್ಸವಕ್ಕೆ ಪರಿಸರ ಸ್ನೇಹಿ ಅರ್ಥವನ್ನು ನೀಡಲಾಯಿತು. ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ, ಸಮಾಜ ಮತ್ತು ಪರಿಸರದ ಮೇಲಿನ ಜವಾಬ್ದಾರಿಯನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕರ್ನಾಟಕ ಅರಣ್ಯ ಇಲಾಖೆ, ಸುಬ್ರಹ್ಮಣ್ಯ ವಲಯ –ಸುಳ್ಯ ವಿಭಾಗದ ಸಹಯೋಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ ಆಗಮಿಸಿದ್ದು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವು ಕಾಲೇಜಿನ ಪ್ರಾಂಶುಪಾಲ ಡಾ. ರುದ್ರ ಕುಮಾರ್ ಎಂ. ಎಂ. ಅವರ ಅಧ್ಯಕ್ಷತೆಯಲ್ಲಿ ನಡೆದು ಸುಳ್ಯ ವಲಯ ಅರಣ್ಯಾಧಿಕಾರಿ ಶ್ರೀ ನಿರಂಜನ್ ಶೆಟ್ಟಿ, ನೆಹರು ಮೆಮೋರಿಯಲ್ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಐ.ಕ್ಯೂ.ಎ.ಸಿ ಸಂಯೋಜಕಿ ಡಾ. ಮಮತಾ ಕೆ., ಎನ್.ಎಂ.ಸಿ ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಧುರಾ ಎಂ. ಆರ್, ಎನ್ ಸಿ ಸಿ ಘಟಕಾಧಿಕಾರಿ ಕ್ಯಾಪ್ಟನ್ ಸೀತಾರಾಮ ಎಂ.ಡಿ, ನೇಚರ್ ಕ್ಲಬ್ ಸಂಚಾಲಕ ಕುಲದೀಪ್ ಪೆಲ್ತಡ್ಕ, ಗ್ರಾಮ ಅರಣ್ಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಐದು ದಶಕಗಳ ಹಿಂದೆ ಜ್ಞಾನ ದೀಪ ಬೆಳಗಿಸಿದ ಶಿಕ್ಷಣ ಸಂಸ್ಥೆಯೊಂದು ಇಂದು ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿರುವ ಸಂದರ್ಭದಲ್ಲಿ, ತನ್ನ ಸುವರ್ಣ ಮಹೋತ್ಸವವನ್ನು ಸಸಿಗಳ ರೂಪದಲ್ಲಿ ಪ್ರಕೃತಿಗೆ ಸಮರ್ಪಿಸಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಶಿಕ್ಷಣ ಸಂಸ್ಥೆಗಳು ಜ್ಞಾನ ಹಂಚುವ ಕೇಂದ್ರಗಳಾಗಿರುವುದರ ಜೊತೆಗೆ ಪರಿಸರ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ ಮತ್ತು ಸುಸ್ಥಿರ ಅಭಿವೃದ್ಧಿಯ ಮೌಲ್ಯಗಳನ್ನು ಬೆಳೆಸುವ ಕೇಂದ್ರಗಳಾಗಬೇಕು ಎಂದು ಅಭಿಪ್ರಾಯಪಟ್ಟರು. ಮಣ್ಣಿನೊಂದಿಗೆ ನೇರವಾಗಿ ಸಂಪರ್ಕ ಸಾಧಿಸಿ ಸಸಿ ನೆಡುವ ಮೂಲಕ ‘ಪ್ರಕೃತಿ ನಮ್ಮ ಆಸ್ತಿ ಮಾತ್ರವಲ್ಲ; ಮುಂದಿನ ಪೀಳಿಗೆಗೆ ನಾವು ಒಪ್ಪಿಸಬೇಕಾದ ಜವಾಬ್ದಾರಿ’ ಎಂಬ ಸಂದೇಶವನ್ನು ವಿದ್ಯಾರ್ಥಿಗಳು ಅರ್ಥೈಸಿಕೊಂಡರು.
ಕಾಲೇಜಿನ 50 ವರ್ಷಗಳ ಶೈಕ್ಷಣಿಕ ಸೇವೆಯನ್ನು ಪ್ರತಿನಿಧಿಸುವ 50 ಸಸಿಗಳು ಮುಂದಿನ ಹಲವು ವರ್ಷಗಳಲ್ಲಿ ಬೆಳೆದು ಮರಗಳಾಗಿ, ನೆರಳು ಆಮ್ಲಜನಕ ಹಸಿರು ಪರಿಸರದ ರೂಪದಲ್ಲಿ ಸಮಾಜಕ್ಕೆ ಕೊಡುಗೆ ನೀಡಲಿವೆ. ಹೀಗಾಗಿ ಸುವರ್ಣ ಮಹೋತ್ಸವದ ನೆನಪು ಕೇವಲ ಛಾಯಾಚಿತ್ರಗಳಲ್ಲಿ ಅಥವಾ ದಾಖಲೆಗಳಲ್ಲಿ ಉಳಿಯದೆ, ಜೀವಂತ ಹಸಿರಿನ ರೂಪದಲ್ಲಿ ಮುಂದುವರಿಯಲಿದೆ ಎಂಬ ಸಂದೇಶವನ್ನು ಸಾರಿದ ‘ಸುವರ್ಣ ಸಿರಿ’ ಕಾರ್ಯಕ್ರಮವು ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಬದ್ಧತೆಗೆ ಮಾದರಿಯಾದ ಸುವರ್ಣ ಮಹೋತ್ಸವದ ಅರ್ಥಪೂರ್ಣ ಪೂರ್ವಭಾವಿ ಆಚರಣೆಯಾಗಿ ಮೂಡಿಬಂತು.
ಕಾರ್ಯಕ್ರಮದಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ, ಎನ್.ಸಿ.ಸಿ ಘಟಕ, ನೇಚರ್ ಕ್ಲಬ್, ಹಿರಿಯ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಉಪನ್ಯಾಸಕರಾದ ಕೃತಿಕಾ ಬೊಳುಗಲ್ಲು, ಜಿತೇಶ್, ಭಾವನಾ, ಶನ್ವಿತಾ, ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಸ್ಥಳೀಯರು ಭಾಗವಹಿಸಿ ಸಸಿ ನೆಡುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.