ಕಿನ್ನಿಕಂಬಳ, ಸೆ. 3: ರೋಸಾ ಮಿಸ್ತಿಕಾ ಪದವಿಪೂರ್ವ ಕಾಲೇಜಿನಲ್ಲಿ ರೋಸಾ ಮಿಸ್ತಿಕಾ ಸಮೂಹ ಸಂಸ್ಥೆಗಳ ಶಿಕ್ಷಕರ ಸಮರ್ಪಿತ ಸೇವೆ ಹಾಗೂ ಅಮೂಲ್ಯ ಕೊಡುಗೆಗಳನ್ನು ಗೌರವಿಸುವ ಉದ್ದೇಶದಿಂದ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.
ಮುಖ್ಯ ಅತಿಥಿ ಭಗಿನಿ ರೂತ್ ಕೈಸಾ ಮಾತನಾಡಿ, “ಶಿಕ್ಷಕರು ಬೋಧಿಸುವ ಪಾಠಗಳು ಕೆಲವೊಮ್ಮೆ ಮರೆತುಹೋಗಬಹುದು. ಆದರೆ ಅವರು ವಿದ್ಯಾರ್ಥಿಗಳಲ್ಲಿ ಬಿತ್ತುವ ಮೌಲ್ಯಗಳು, ಆದರ್ಶಗಳು ಹಾಗೂ ಜೀವನಪಾಠಗಳು ಸದಾ ಅವರ ಹೃದಯದಲ್ಲಿ ಅಚ್ಚಳಿಯದೆ ಉಳಿಯುತ್ತವೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮೂಹ ಸಂಸ್ಥೆಗಳ ಸಂಚಾಲಕಿ ಭಗಿನಿ ರೊಸೆಲಿಟಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉತ್ತಮ ಗುಣನಡತೆ ಹಾಗೂ ಚಾರಿತ್ರ್ಯವನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ಕೇವಲ ಜ್ಞಾನವನ್ನು ನೀಡುವವರಲ್ಲ, ಬದಲಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖ್ಯಸ್ಥೆ ಭಗಿನಿ ಲೀನಾ ಪಿರೇರಾ, ಶಾಲಾ ಮುಖ್ಯಸ್ಥರಾದ ಭಗಿನಿ ಅನಿತಾ ಲಿಡಿಯ, ಭಗಿನಿ ಮರಿಸ ಲೂಸಿ, ಭಗಿನಿ ವೀಣಾ ಹಾಗೂ ಭಗಿನಿ ಜೆಸಿಂತಾ ಡಿಸೋಜಾ ಉಪಸ್ಥಿತರಿದ್ದರು.
ರೋಸಾ ಮಿಸ್ತಿಕಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವೃಂದ ಕಾರ್ಯಕ್ರಮವನ್ನು ಸಂಯೋಜಿಸಿದರು. ಶ್ರೀಮತಿ ಈಷಾ ವಿನುತಾ ಡಿಸೋಜಾ ಸ್ವಾಗತಿಸಿದರು. ಶ್ರೀಮತಿ ಸುಪ್ರಿಯಾ ಜೆ. ಲೋಪಿಸ್ ನಿರೂಪಿಸಿದರು. ಶ್ರೀಮತಿ ಅಶ್ವಿತಾ ವಂದನಾರ್ಪಣೆ ಸಲ್ಲಿಸಿದರು.