ಉಜಿರೆ, 26 ನವೆಂಬರ್ 2024: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ನ. 25ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ, ಹೆಗ್ಗಡೆ ಜೀವನ ಶೈಲಿ, ಭಕ್ತರ ಮೇಲಿರುವ ಪ್ರೀತಿ, ಕಾಳಜಿ, ವಿದ್ಯಾಭ್ಯಾಸಕ್ಕೆ ಅವರ ಪ್ರೋತ್ಸಾಹ, ಗ್ರಾಮಾಭಿವೃಧ್ಧಿ ಯೋಜನೆಯ ಪರಿಕಲ್ಪನೆ, ಸ್ವಚ್ಛತೆಗೆ ಕೊಡುವ ಮಹತ್ವ, ಸರಳತೆ ಕುರಿತು ತಿಳಿಸಿದರು.
ಮುಖ್ಯೋಪಾಧ್ಯಾಯ ಸುರೇಶ್ ಕೆ. ಅವರು ಹೆಗ್ಗಡೆ ಅವರ ಆದರ್ಶಪೂರ್ಣ ವ್ಯಕ್ತಿತ್ವ ಬಗ್ಗೆ ಮಾತನಾಡಿದರು. ವಿದ್ಯಾರ್ಥಿ ಸುಮಂತ್ ಖಾವಂದರ ಅಭಿವೃದ್ಧಿ ನಡೆಯ ಬಗ್ಗೆ ತಿಳಿಸಿದರು.
ವಿದ್ಯಾರ್ಥಿಗಳು ಹೆಗ್ಗಡೆ ಅವರ ವ್ಯಕ್ತಿತ್ವದ ಬಗ್ಗೆ ಭಿತ್ತಿಪತ್ರಿಕೆ ರಚಿಸಿ ಪ್ರದರ್ಶಿಸಿದರು. ಹೆಗ್ಗಡೆ ಅವರ ಜೀವನದ ವಿವಿಧ ಪ್ರಗತಿಯ ತುಣುಕುಗಳ ವೀಡಿಯೋ ಪ್ರದರ್ಶನ ಮಾಡಲಾಯಿತು. ಅವರ ದೂರದರ್ಶಿ ಯೋಜನೆಗಳ ಬಗ್ಗೆ ತಿಳಿಸವ ‘ವಿಶನ್ ಟು ಮಿಶನ್’ ಚಾರ್ಟ್ ಅನಾವರಣಗೊಳಿಸಲಾಯಿತು.
10ನೇ ತರಗತಿ ವಿದ್ಯಾರ್ಥಿನಿಯರು ಹೆಗ್ಗಡೆ ಅವರ ಹುಟ್ಟುಹಬ್ಬ ಕುರಿತು ಹಾಡು ಹಾಡಿದರು. ವಿದ್ಯಾರ್ಥಿಗಳಿಗೆ ಹೆಗ್ಗಡೆ ಅವರ ಭಾವಚಿತ್ರ ರಚನೆ, ಸ್ವರಚಿತ ಕವನ, ಭಾಷಣ ಸ್ಪರ್ಧೆ ಏರ್ಪಡಿಸಲಾಯಿತು.
10ನೇ ತರಗತಿ ವಿದ್ಯಾರ್ಥಿಗಳಾದ ಜೀವಿತ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶೌರ್ಯ ಅತಿಥಿ ಪರಿಚಯ ನೀಡಿದರು. ಸಮೀಕ್ಷಾ ಸ್ವಾಗತಿಸಿದರು. ತುಳಸಿ ಧನ್ಯವಾದ ಸಮರ್ಪಿಸಿದರು. ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.