ಮೂಡ್ಲಕಟ್ಟೆ, 27 ಫೆಬ್ರವರಿ 2025: ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡೋತ್ಸವದ ಸಂಭ್ರಮ: ಕ್ರೀಡೆಗೆ ಕಾಲೇಜು ಉತ್ತಮ ರೀತಿಯಲ್ಲಿ ಉತ್ತೇಜನ ನೀಡುತ್ತಿದ್ದು, ಇಲ್ಲಿ ಅತ್ಯುತ್ತಮ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ವಿಶ್ವವಿದ್ಯಾಲಯದ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿ. ಶಿಕ್ಷಣದ ಜೊತೆಗೆ ಕ್ರೀಡೆಗೂ ಕೂಡ ಮಹತ್ವ ನೀಡಿ ಎಂದು 24 ಫೆಬ್ರವರಿ 2025ರ ಕ್ರೀಡೋತ್ಸವದ ಉದ್ಘಾಟಕರಾಗಿ ಆಗಮಿಸಿದ ಜನತಾ ಪಿ ಯು ಕಾಲೇಜು ಹೆಮ್ಮಾಡಿ ಇದರ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಕೃಷ್ಣ ಮೊಗವೀರರವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮವನ್ನು ಕ್ರೀಡಾ ಜ್ಯೋತಿಯ ಪ್ರಜ್ವಲದೊಂದಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಕ್ರೀಡಾಕೂಟದ ಪ್ರಮುಖ ಆಕರ್ಷಣೆಯಾಗಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಪಾಲ್ಗೊಂಡರು. 6 ತಂಡಗಳಾಗಿ ವಿಂಗಡಿಸಲಾದ ವಿದ್ಯಾರ್ಥಿಗಳ ಗುಂಪು ಅದ್ಬುತ ಪಥಸಂಚಲನವನ್ನು ಪ್ರದರ್ಶಿಸಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಾಟೀಲ್ ಅವರು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ಪರಸ್ಪರ ಸಹಕಾರ ಹಾಗೂ ಸ್ಪರ್ಧಾ ಮನೋಭಾವನೆಯನ್ನು ಹೊಂದಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆ, ‘ಕಾಲೇಜಿನ ಆಡಳಿತ ಮಂಡಳಿ ಕ್ರೀಡೆಗೆ ಮಹತ್ವ ನೀಡುತ್ತದೆ. ಅದಕ್ಕಾಗಿ ಹೊಸತಾಗಿ 400 ಮೀಟರ್ ಟ್ರ್ಯಾಕ್ ಅನ್ನು ನಿರ್ಮಿಸಿ ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ನೀಡುತ್ತಿದೆ, ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಿ’ ಎಂದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಪ್ರವೀಣ್ ಖಾರ್ವಿ, ವಾರ್ಷಿಕ ಕ್ರೀಡಾ ವರದಿ ವಾಚಿಸಿದರು. ಕು. ಶ್ರೀರಕ್ಷ ಸ್ವಾಗತ ಮತ್ತು ವಂದನಾರ್ಪಣೆ ಸಲ್ಲಿಸಿದರು. ಕಾಲೇಜಿನ ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು. ಸಂತೃಪ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ದಿನಾಂಕ 25 ಫೆಬ್ರವರಿ 2025 ರಂದು ಗುಂಪು ವಿಭಾಗದ ಕ್ರೀಡೆಗಳು ನಡೆದವು.