ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ) ನಿಂದ ನಡೆಸಲ್ಪಡುವ ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಏಪ್ರಿಲ್ 4 ರಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಎಲ್.ಸಿ ಆರ್ ಸಭಾಂಗಣದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೋ ಸಂಸ್ಥೆಯ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ಮುಂದಿನ ಹಂತದ ಶಿಕ್ಷಣಕ್ಕೆ ಬೇಕಾದ ಪೂರಕ ಮಾಹಿತಿಗಳನ್ನು ನೀಡಿ, ಶಿಕ್ಷಣ ಮತ್ತು ಜೀವನ ಇವೆರಡರ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.ಸಂಸ್ಥೆಯ ಸಂಯೋಜಕರಾದ ಯಶವಂತ್ . ಜಿ. ನಾಯಕ್ ಮಾತನಾಡಿ ವಿದ್ಯಾರ್ಥಿ ಜೀವನಕ್ಕೆ ಬೇಕಾದ ಪ್ರಮುಖ ಮೌಲ್ಯಗಳನ್ನು ತಿಳಿಸಿ ಅವರ ಮುಂದಿನ ಶೈಕ್ಷಣಿಕ ಬದುಕಿಗೆಶುಭ ಹಾರೈಸಿದರು.
ತದನಂತರ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯ ನೆರೆದಿದ್ದ ಎಲ್ಲ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡಿ ಅವರ ಮುಂದಿನಶೈಕ್ಷಣಿಕ ಜೀವನಕ್ಕೆ ಪ್ರೇರಣದಾಯಕ ಮಾತುಗಳ ಮೂಲಕ ಶುಭ ಹಾರೈಸಿದರು.ಕಾರ್ಯಕ್ರಮದ ಕೇಂದ್ರಬಿಂದುಗಳಾದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಸಂಸ್ಥೆಯ ಬಗ್ಗೆ ಹಾಗೂ ಮಾರ್ಗದರ್ಶನ ನೀಡಿದ ಎಲ್ಲಾ ಶಿಕ್ಷಕ ವೃಂದದವರನ್ನು ಅಭಿನಂದಿಸಿ, ವಿದ್ಯಾಸಂಸ್ಥೆಯಲ್ಲಿ ಕಳೆದ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಭಾವನಾತ್ಮಕವಾಗಿ ತಮ್ಮತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ಸಂಸ್ಥೆಯ ಗುರುವೃಂದದವರು ವಿದ್ಯಾರ್ಥಿಗಳ ಬಗ್ಗೆ ಅಭಿಪ್ರಾಯ ಗಳನ್ನು ಹಂಚಿಕೊಂಡು ಶುಭ ಹಾರೈಸಿದರು.ತದನಂತರ ವಿವಿಧ ವಿನೋದಾವಳಿ ಆಟಗಳು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳನ್ನು ಮನರಂಜಿಸಿದರು. ವಿಶೇಷವಾಗಿ ಸಂಸ್ಥೆಯಲ್ಲಿ ಎಸ್. ಎಸ್.ಎಲ್.ಸಿ ವಿದ್ಯಾರ್ಥಿಗಳು ಕಳೆದ ಸುಂದರ ಕ್ಷಣಗಳನ್ನು ದೃಶ್ಯಾವಳಿಗಳ ಮೂಲಕ ಮೆಲುಕು ಹಾಕಿ ಎಲ್ಲರನ್ನೂ ಭಾವುಕರನ್ನಾಗಿಸಿದರು.ನೆರೆದಿದ್ದ ಎಲ್ಲರಿಗೂ ಸವಿರುಚಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಭ್ರಮದ ಈ ಕಾರ್ಯಕ್ರಮವನ್ನು ಒಂಬತ್ತನೇ ತರಗತಿ ವಿದ್ಯಾರ್ಥಿಗಳು ಸುಂದರವಾಗಿ ಆಯೋಜಿಸಿದರು.ವಿದ್ಯಾರ್ಥಿ ಗೌತಮ್ ಎಲ್ಲರನ್ನೂ ಸ್ವಾಗತಿಸಿ,ಸಮನ್ವಿ ಮತ್ತು ಅದಿತಿ ಎಂ ಪ್ರಭು ನಿರೂಪಿಸಿ ಹವಿಶ್ ವಂದಿಸಿದರು.ಕಾರ್ಯಕ್ರಮವು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.