ಮೂಡ್ಲಕಟ್ಟೆ, 5 ಮಾರ್ಚ್ 2025: ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮೂಡ್ಲಕಟ್ಟೆ, ಕೊಂಕಣ್ ರೈಲ್ವೆ ಮತ್ತು ರಾಮಕೃಷ್ಣ ಹೆಗಡೆ ಕೌಶಲ್ಯ ತರಬೇತಿ ಕೇಂದ್ರ ಮಣಿಪಾಲ ಇವರ ಸಹಯೋಗದೊಂದಿಗೆ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಎರಡು ದಿನದ ವೃತ್ತಿ ಮಾರ್ಗದರ್ಶನ ಮತ್ತು ಕೌಶಲ್ಯ ತರಬೇತಿಯನ್ನು ಹಮ್ಮಿಕೊಂಡಿತ್ತು.
ಮೊದಲ ದಿನದ ಕಾರ್ಯಕ್ರಮದಲ್ಲಿ ಮಾಹೆ ಮಣಿಪಾಲದ ವಾಣಿಜ್ಯ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಸತೀಶ್ ಕುಮಾರ್ ರವರು ‘ಕಚೇರಿಯಲ್ಲಿ ಅನುಸರಿಸಬೇಕಾದ ಸಭ್ಯತೆ’ ವಿಷಯದ ಕುರಿತು ಮಾತನಾಡಿದರು. ದಿನದ ಎರಡನೇ ಅವಧಿಯಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾಹೆ ಮಣಿಪಾಲದ ವಾಣಿಜ್ಯ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ರೆನ್ ಟ್ರೇವೊರ್ ಡಯಾಸ್ ರವರು ‘ ನಾಯಕತ್ವ ಗುಣಗಳು’ ವಿಷಯದ ಕುರಿತು ತರಬೇತಿಯನ್ನು ನೀಡಿದರು. ಅತ್ಯುತ್ತಮ ನಾಯಕರಾಗಿ ಹೇಗೆ ಹೊರಹೊಮ್ಮಬಹುದು ಎನ್ನುವುದನ್ನು ಕ್ರೀಡಾ ಉದಾರಣೆಗಳ ಮೂಲಕ ತಿಳಿಸಿದರು.
ದಿನದ ಮೂರನೇ ಅವಧಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಣಿಪಾಲದ ವಾಣಿಜ್ಯ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಮಿಥುನ್ ಎಸ್ ಉಲ್ಲಾಳ್ ರವರು ‘ ಸಂವಹನ ಕೌಶಲ್ಯ ‘ ವಿಷಯದ ಕುರಿತು ಮಾತನಾಡುತ್ತಾ ಸಂವಹನಕ್ಕೆ ಇರುವ ಶಕ್ತಿ ಮತ್ತು ವಿಸ್ತಾರವನ್ನು ವಿವರಿಸಿದರು ಸಂವಹನ ಹೇಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಬಲ್ಲದು ಎನ್ನುವುದನ್ನು ತಿಳಿಸಿದರು.
ಎರಡನೇ ದಿನದ ತರಬೇತಿ ಕಾರ್ಯಕ್ರಮದಲ್ಲಿ ಕರಾವಳಿ ಜಿಲ್ಲೆಯ ಪ್ರಸಿದ್ಧ ಕೌಶಲ್ಯ ತರಬೇತುದಾರರಾದ ಶ್ರೀ ಚಂದನ್ ರಾವ್ ರವರು ‘ರೆಸುಮ್ ಬಿಲ್ಡಿಂಗ್ ಮತ್ತು ಇಂಟರ್ವ್ಯೂ ಟೆಕ್ನಿಕ್’ ವಿಷಯದ ಕುರಿತು ತರಬೇತಿಯನ್ನು ನೀಡಿದರು. ರೆಸುಮ್ ರಚಿಸುವ ಬಗೆ ಮತ್ತು ವ್ಯಕ್ತಿ ಸಂದರ್ಶನದ ಸಮಯದಲ್ಲಿ ಅನುಸರಿಸಬೇಕಾದ ಕ್ರಮದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಇದೇ ದಿನದಂದು ಎರಡನೇ ಅವಧಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಕೊಂಕಣ್ ರೈಲ್ವೆಯ ವ್ಯವಸ್ಥಾಪಕರಾದ ಶ್ರೀ ಶ್ರೀಧರ್ ಅವಬ್ರತ್ ರವರು ‘ರೈಲ್ವೆ ಇಲಾಖೆಯ ನೇಮಕಾತಿಗಳು’ ವಿಷಯದ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಇಲಾಖೆಯ ನೇಮಕಾತಿಗೆ ನಡೆಸಬೇಕಾದ ತಯಾರಿಯ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು. ಎರಡು ದಿನ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಐಎಂಜೆ ಪದವಿ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ ಕುಮಾರ್, ದೈಹಿಕ ಶಿಕ್ಷಕರಾದ ಶ್ರೀ ಪ್ರವೀಣ್ ಖಾರ್ವಿ ಮತ್ತು ರಾಮಕೃಷ್ಣ ಹೆಗಡೆ ಕೌಶಲ್ಯ ತರಬೇತಿ ಕೇಂದ್ರ ಮಣಿಪಾಲ ಇದರ ಉಸ್ತುವಾರಿ ಶ್ರೀ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.