ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಅಂಬಿಕಾ ಸಿ ಬಿ ಎಸ್ ಇ ವಿದ್ಯಾಲಯದಲ್ಲಿ 2024-25ರ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ. ಸಂಸ್ಥೆಯ ಖಜಾಂಚಿ, ಶ್ರೀಮತಿ ರಾಜಶ್ರೀ ನಟ್ಟೋಜ, ” ತ್ರಿಭುಜದ 3 ಬಾಹುಗಳು ಹೇಗೆ ಬಿಂದುವಿನಲ್ಲಿ ಸೇರುತ್ತವೋ, ಹಾಗೆಯೇ ನಿಮ್ಮ ಬಾಳಿನ ಮೂರು ಬಾಹುಗಳು ಶಾಲಾ ಶಿಕ್ಷಣ, ಧರ್ಮ ಶಿಕ್ಷಣ ಹಾಗೂ ಅಧ್ಯಾತ್ಮ ಶಿಕ್ಷಣ ಆಗಿರಬೇಕು” ಎಂದರು. ಭಾರತೀಯ ಮೂಲವನ್ನು ಮರೆಯಬಾರದು ಎಂದರು.
ಸಂಸ್ಥೆಯ ಅಧ್ಯಕ್ಷ ಶ್ರೀ ಸುಬ್ರಮಣ್ಯ ನಟ್ಟೋಜ ಇವರು ಮಾತನಾಡಿ “ದೇಶಕ್ಕಾಗಿ ತಮ್ಮನ್ನು ತಾವು ಮುಡಿಪಾಗಿಡುವುದೇ ಜೀವನದ ಉದ್ದೇಶವಾಗಿರಬೇಕು,ನೀವು ದೊಡ್ಡ ದೊಡ್ಡ ಹುದ್ದೆ ಅಲಂಕರಿಸಿದ್ದರೂ ದೇಶಕ್ಕೆ ಸಂಕಷ್ಟ ಬಂದಾಗ ಓಗೊಟ್ಟು ದೇಶಸೇವಕರಾಗಿ ಸಹಕರಿಸುವ ಸತ್ಪ್ರಜೆ ಗಳಾಗಿ “ಎಂದು ಹಾರೈಸಿದರು.
ಶಾಲಾ ಪ್ರಾಂಶುಪಾಲರಾದ ಕು ಮಾಲತಿ ಡಿ, ಉಪಪ್ರಾಂಶುಪಾಲರಾದ ಶ್ರೀಮತಿ ಸುಜನಿ ಬೋರ್ಕರ್ ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಹೆತ್ತವರ ಪಾದಪೂಜೆ ಮಾಡಿ ವಿದ್ಯಾರ್ಥಿಗಳು, ಆಶೀರ್ವಾದ ಪಡೆದುಕೊಂಡರು. 9ನೇ ತರಗತಿಯ ಮನಸ್ವಿ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿರಾದಿತ್ಯ ಸ್ವಾಗತ ಹಾಗೂ ಚೈತನ್ಯ ಧನ್ಯವಾದ ಸಮರ್ಪಿಸಿದರು.