ಉಜಿರೆ, 21 ಡಿಸೆಂಬರ್ 2024: ಇಲ್ಲಿನ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆ, ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯಕ್ರಮ) ಹಾಗೂ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಸಿ.) ಶಾಲೆಗಳ ಸುಮಾರು 1,000 ವಿದ್ಯಾರ್ಥಿಗಳು, ‘ಮಾನವ ಕಂಪ್ಯೂಟರ್’, ‘ಗಣಿತ ಮಾಂತ್ರಿಕ’ ಖ್ಯಾತಿಯ, ಬೆಳಗಾವಿಯ ಬಸವರಾಜ್ ಶಂಕರ್ ಉಮ್ರಾಣಿ ಅವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಉಜಿರೆಯ ಇಂದ್ರಪ್ರಸ್ಥ ಒಳಾಂಗಣದಲ್ಲಿ ಡಿ. 17 ರಂದು ಕಾರ್ಯಕ್ರಮ ಜರಗಿತು.ದೃಷ್ಟಿಹೀನರಾಗಿದ್ದರೂ, ಗಣಿತದ ಮೂಲ ಕ್ರಿಯೆಗಳಾದ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರಗಳಲ್ಲಿ ಬರುವ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಉತ್ತರಿಸುವ ವಿಶೇಷ ಕೌಶಲ, ಸ್ಮರಣಶಕ್ತಿಯನ್ನು ಪ್ರದರ್ಶಿಸಿದ ಬಸವರಾಜ್, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಹಾಗೂ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರು ಬಸವರಾಜ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ, ಶುಭ ಹಾರೈಸಿದರು. ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಧನ್ಯಕುಮಾರ್, ಮೂರೂ ಶಾಲೆಗಳ ವಿದ್ಯಾರ್ಥಿವೃಂದ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕ ರಾಧಾಕೃಷ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯ ಸುರೇಶ್ ಕೆ. ವಂದಿಸಿದರು.